Sunday, 12 May 2024

ರಸ್ತೆ ಅಪಘಾತದಲ್ಲಿ ಖ್ಯಾತ ಕಿರುತೆರೆ ನಟಿ ಪವಿತ್ರ ಜಯರಾಂ ದುರ್ಮರಣ.


ಕಿರುತೆರೆ ನಟಿ ಪವಿತ್ರಾ ಜಯರಾಂ(35) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದ ಕರ್ನೂಲು ಸಮೀಪ ನಡೆದ ಕಾರು ಅಪಘಾತದಲ್ಲಿ ಅವರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಭಾನುವಾರ(ಮೇ.12 ರಂದು) ಅವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಬಸ್‌ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ನಟಿ  ಪವಿತ್ರಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮೂಲತಃ ಕನ್ನಡಿಗರಾದ ಪವಿತ್ರ ತೆಲುಗಿನ ʼತ್ರಿನಯನಿʼ ಧಾರವಾಹಿಯಲ್ಲಿ ನಟಿಸಿ ಅಪಾರ ಮನೆ ಮಂದಿಯ ಮನಗೆದ್ದಿದ್ದರು.

ಕನ್ನಡದ ‘ರೋಬೋ ಫ್ಯಾಮಿಲಿ’ ಮೂಲಕ ಕಿರುತೆರೆಗೆ ಪ್ರವೇಶ ಪಡೆದಿದ್ದ ಅವರು, ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು.

ಕನ್ನಡದಲ್ಲಿ ಅವರು ʼರೋಬೋ ಫ್ಯಾಮಿಲಿʼ ಸೇರಿ ʼಜೋಕಾಲಿʼ, ʼನೀಲಿʼ, ʼರಾಧಾರಮಣʼ ಧಾರವಾಹಿಯಲ್ಲಿ ನಟಿಸಿದ್ದರು.

ಘಟನೆಯಲ್ಲಿ ಪವಿತ್ರ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರಿನಲ್ಲಿ ಅವರ ಕುಟುಂಬಸ್ಥರು ಇದ್ದರು ಎನ್ನಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ.

ನಟಿಯ ಹಠಾತ್‌ ನಿಧನಕ್ಕೆ ಕಿರುತೆರೆ ಲೋಕ ಶಾಕ್‌ ಆಗಿದೆ.

Wednesday, 8 May 2024

ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ಅಸ್ತಂಗತ

 ಬೆಳ್ತಂಗಡಿ: ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕ, ಬೆಳ್ತಂಗಡಿ ಗುರುದೇವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಸರಕಾರದ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸಿದ್ದ, ಕೆ. ವಸಂತ ಬಂಗೇರ (79ವ) ಅವರು ಅಲ್ಪಕಾಲದ ಅಸೌಖ್ಯದಿಂದ ಬಳಲಿ ಮೇ 8 ರಂದು ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.




ಕುವೆಟ್ಟು ಗ್ರಾಮದವರು. ಕೇದೆ ಸುಬ್ಬ ಪೂಜಾರಿ ಮತ್ತು ದೇವಕಿ ದಂಪತಿಯ ಪುತ್ರರಾಗಿರುವ ಬಂಗೇರರು 15 ಜನವರಿ 1946ರಂದು ಜನಿಸಿದ್ದರು. ವಸಂತ ಬಂಗೇರ ಅವರು ಬೆಳ್ತಂಗಡಿಯ ಬೋರ್ಡ್ ಹೈಸ್ಕೂಲ್‌ನಲ್ಲಿ ಎಸ್. ಎಸ್. ಎಲ್. ಸಿ. ಯನ್ನು ಮಾಡಿದರು. ಮುಲ್ಕಿ ಮತ್ತು ಉಜಿರೆಯ ಎಸ್. ಡಿ.ಎಂ. ಕಾಲೇಜುಗಳಲ್ಲಿ ವ್ಯಾಸಂಗವನ್ನು ಮಾಡಿ 1962 ರಲ್ಲಿ ಪಿ.ಯು.ಸಿ ವ್ಯಾಸಂಗ ಮಾಡಿದರು. 1972 ರಲ್ಲಿ ಕುವೆಟ್ಟು ಗ್ರಾಮ ಪಂಚಾಯತ್‌ನ ಚುನಾವಣೆಯಲ್ಲಿ ಅವಿರೋಧವಾಗಿ ಸದಸ್ಯರಾಗಿ ಆಯ್ಕೆಯಾಗಿ ನಂತರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.1983 ರಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚುನಾಯಿತರಾಗಿ ಪ್ರಥಮ ಬಾರಿಗೆ ವಿಧಾನ ಸಭೆಯನ್ನು ಪ್ರವೇಶಿಸಿದ್ದರು.


1985ರಲ್ಲಿ ಮತ್ತೆ ಭಾಜಪ ಬೆಂಬಲದಿಂದ ಸ್ಪರ್ಧಿಸಿ ಶಾಸಕರಾದರು. 1989ರಲ್ಲಿ ಬಿಜೆಪಿಯನ್ನು ತೊರೆದು ಜತ್ಯಾತೀತ ಜನತಾದಳಕ್ಕೆ ಸೇರ್ಪಡೆಗೊಂಡು ಸ್ಪರ್ಧಿಸಿ, ಸೋತ್ತಿದ್ದರು.1994ರಲ್ಲಿ ಜಾತ್ಯಾತೀತ ಜನತಾದಳದಿಂದ ಸ್ಪರ್ಧಿಸಿದ್ದ ಕೆ. ವಸಂತ ಬಂಗೇರ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಈ ಅವಧಿಯಲ್ಲಿ ಬಂಗೇರರು ವಿಧಾನ ಸಭೆಯ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸಿದ್ದರು. 1999ರಲ್ಲಿ ಮತ್ತು 2004ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಬಂಗೇರರು ಸೋಲು ಅನುಭವಿಸಿದ್ದರು. ೨೦೦೮ರ ವಿಧಾನ ಸಭಾ ಚುನಾವಣೆಯಲ್ಲಿ ಬಂಗೇರರು ಜೆಡಿಎಸ್ ತೊರೆದು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಕಾಂಗ್ರೆಸ್ ಬೆಂಬಲದಲ್ಲಿ ಸ್ಪರ್ಧಿಸಿ ನಾಲ್ಕನೇ ಅವಧಿಗೆ ಶಾಸಕರಾಗಿ ಚುನಾಯಿತರಾಗುವಲ್ಲಿ ಯಶಸ್ವಿಯಾದರು. 2013ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾದ ಮತ್ತೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಅವಧಿಯಲ್ಲಿ ಸಿದ್ಧರಾಮಯ್ಯ ಅವರ ಸರಕಾರವು ವಸಂತ ಬಂಗೇರ ಅವರನ್ನು ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ನೇಮಿಸಿತ್ತು. 2018 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದರು.



ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಎಂಟು ಬಾರಿ ಸ್ಪರ್ಧಿಸಿ ಐದು ಬಾರಿ ಶಾಸಕರಾಗಿ, ಸರಕಾರದ ಮುಖ್ಯ ಸಚೇತಕರಾಗಿ ಸೇವೆಸಲ್ಲಿಸಿದ್ದ ಬಂಗೇರರು, ಶ್ರೀ ಗುರುನಾರಾಯಣ ಸೇವಾ ಸಂಘದ ಗೌರವಾಧ್ಯಕ್ಷರಾಗಿ, ಗುರುದೇವ ಕಾಲೇಜಿನ ಅಧ್ಯಕ್ಷರಾಗಿ, ಗುರುದೇವ ಸಹಕಾರಿ ಸಂಘದ ಸ್ಥಾಪಕರಲ್ಲಿ ಓರ್ವರಾಗಿ ಕೊಡುಗೈ ದಾನಿಯಾಗಿಯಾಗಿದ್ದರು. ಮೃತರು ಪತ್ನಿ ಸುಜಿತಾ ವಿ. ಬಂಗೇರ ಹಾಗೂ ಇಬ್ಬರು ಪುತ್ರಿಯರು, ಬಂದು ವರ್ಗದವರನ್ನು ಅಗಲಿದ್ದಾರೆ.


ಮುಂಜಾನೆ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸುವ ನಿರೀಕ್ಷೆ ಇದೆ. ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ

Thursday, 1 February 2024

ಖ್ಯಾತ ಹುಲಿವೇಷಧಾರಿ ಅಶೋಕ್ ರಾಜ್ ಕಾಡಬೆಟ್ಟು ಇನ್ನಿಲ್ಲ.


ಉಡುಪಿ: ಖ್ಯಾತ ಹುಲಿವೇಷಧಾರಿ ಅಶೋಕ್ ರಾಜ್ ಕಾಡಬೆಟ್ಟು ಅವರು ಗುರುವಾರ ಸಂಜೆ ಉಡುಪಿಯ ಖಾಸಗಿ ನಿಧನ ಹೊಂದಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು.

ಕಳೆದ ನವರಾತ್ರಿ ಸಮಯದಲ್ಲಿ ಬೆಂಗಳೂರಿನಲ್ಲಿ ನಡೆದ ಹುಲಿವೇಷ ಕಾರ್ಯಕ್ರಮದಲ್ಲೇ ಕುಸಿದು ಬಿದ್ದಿದ್ದ ಅವರನ್ನು ಬೆಂಗಳೂರಿನಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಗೆ ಕರೆತಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಂಜೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅವರ ಸಹೋದರ ಹುಲಿ ವೇಷಧಾರಿ ಕಲಾವಿದ ಕಿಶೋರ್ ರಾಜ್ ಕಾಡಬೆಟ್ಟು ತಿಳಿಸಿದ್ದಾರೆ.

ನೂರಾರು ಮಂದಿಗೆ ಹುಲಿವೇಷ ತರಬೇತಿ ನೀಡುತ್ತಿದ್ದ ಅಶೋಕ್ ರಾಜ್ ಕಾಡಬೆಟ್ಟು ಕರಾವಳಿಯೆಲ್ಲೆಡೆ ಜನಪ್ರಿಯರಾಗಿದ್ದರು.

Wednesday, 24 January 2024

ಚುನಾವಣೆ ನಂತರ ರಾಹುಲ್ ಗಾಂಧಿಯವರನ್ನು ಬಂಧಿಸಲಾಗುವುದು: ಅಸ್ಸಾಂ ಸಿಎಂ


ಸಿಬ್ಸಾಗರ್: ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿರುವ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆ ಚುನಾವಣೆ ನಂತರ ಬಂಧಿಸಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಬುಧವಾರ ಹೇಳಿದ್ದಾರೆ.

ಮಂಗಳವಾರ ನಡೆದ ಕಾಂಗ್ರೆಸ್ ಪಕ್ಷದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ವೇಳೆ ಅಸ್ಸಾಂ ಪೊಲೀಸರು ಸ್ವಯಂ ಪ್ರೇರಿತವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇತರ ಹಲವು ನಾಯಕರ ವಿರುದ್ಧ “ಉದ್ದೇಶಪೂರ್ವಕ ಹಿಂಸಾಚಾರದ ಕೃತ್ಯಗಳ” ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

“ನಾವು ಎಫ್‌ಐಆರ್ ದಾಖಲಿಸಿದ್ದೇವೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಲಿದೆ ಮತ್ತು ಲೋಕಸಭೆ ಚುನಾವಣೆಯ ನಂತರ ರಾಹುಲ್ ಗಾಂಧಿಯವರನ್ನು ಬಂಧಿಸಲಾಗುವುದು ”ಎಂದು ಸಿಬ್ಸಾಗರ್ ಜಿಲ್ಲೆಯ ನಜೀರಾದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಶರ್ಮಾ ಸುದ್ದಿಗಾರರಿಗೆ ಹೇಳಿಕೆ ನೀಡಿದ್ದಾರೆ.

”ಎಸ್‌ಐಟಿ ಮೂಲಕ ಸಮಗ್ರ ತನಿಖೆಗಾಗಿ ಪ್ರಕರಣವನ್ನು ಅಸ್ಸಾಂ ಸಿಐಡಿಗೆ ವರ್ಗಾಯಿಸಲಾಗಿದೆ” ಎಂದು ಪೊಲೀಸ್ ಮಹಾನಿರ್ದೇಶಕ ಜಿ.ಪಿ. ಸಿಂಗ್ ಹೇಳಿದ್ದಾರೆ.

ಅಸ್ಸಾಂ ನಲ್ಲಿ ನಡೆಯುತ್ತಿರುವ ಯಾತ್ರೆ ವೇಳೆ ಆಕ್ರೋಶ ಹೊರ ಹಾಕಿರುವ ರಾಹುಲ್ ಗಾಂಧಿ, ”ಹಿಮಂತ ಬಿಸ್ವಾ ಶರ್ಮಾ ದೇಶದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿಯಾಗಿದ್ದು, ಅವರ ನಿಯಂತ್ರಕ ದೆಹಲಿಯಲ್ಲಿ ಕುಳಿತಿದ್ದಾರೆ. ಶರ್ಮಾ ಅವರಿಗೆ ರಾಹುಲ್ ಗಾಂಧಿಯನ್ನು ಹೆದರಿಸಬಹುದು ಎಂಬ ಕಲ್ಪನೆ ಎಲ್ಲಿಂದ ಬಂತು ಎಂದು ತಿಳಿದಿಲ್ಲ.ನನ್ನ ಮೇಲೆ ಎಷ್ಟು ಬೇಕೋ ಅಷ್ಟು ಕೇಸ್ ಹಾಕಲಿ ನನಗೆ ಭಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ

Friday, 19 January 2024

ಗೋಕರ್ಣದಲ್ಲಿ ಪ್ರಭು ಶ್ರೀ ರಾಮ ತಪಸ್ಸು: ಬ್ರಹ್ಮ ಹತ್ಯೆ ದೋಷ ನಿವಾರಣೆಗೆ ರಾಮತೀರ್ಥ ದೇವಸ್ಥಾನ ಸ್ಥಾಪನೆ


ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಇತ್ತ ಪುರಾಣ ಪ್ರಸಿದ್ಧ ಗೋಕರ್ಣದಲ್ಲಿ ಶ್ರೀ ರಾಮ ಬ್ರಹ್ಮ ಹತ್ಯೆ ದೋಷ ನಿವಾರಣೆಗೆ ತಪಸ್ಸು ನಡೆಸಿದ ರಾಮ ತೀರ್ಥದಲ್ಲಿ ದೇವಸ್ಥಾನ ಜೀರ್ಣೋದ್ಧಾರದ ಜೊತೆ ಜೊತೆಗೆ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. 

ಸುಂದರ ಶಾಂತತೆಯ ಪರಿಸರ ಹೊಂದಿರುವ ಈ ರಾಮತೀರ್ಥ ಕ್ಷೇತ್ರ ಹೆಚ್ಚು ಪ್ರಚಲಿತವಿಲ್ಲ.

ಇನ್ನು ಬ್ರಾಹ್ಮಣನಾದ ರಾವಣನನ್ನು ರಾಮ ವಧಿಸಿದ ನಂತರ ಬ್ರಹ್ಮ ಹತ್ಯೆ ದೋಷ ನಿವಾರಣೆಗಾಗಿ ಇಲ್ಲಿಗೆ ಬಂದು ತಪಸ್ಸು ಆಚರಿಸಿದ ಎಂಬ ಪ್ರತೀತಿ ಇದೆ. ಈ ಪುಷ್ಕರಣಿಯನ್ನು ರಾಮ ತನ್ನ ಬಾಣದಿಂದ ಸೃಷ್ಟಿಸಿದ ಎಂಬ ಪುರಾಣ ಕಥೆ ಇದ್ದು ಸರ್ವ ಋತುವಿನಲ್ಲೂ ಸ್ಫಟಿಕದಂತೆ ಶುದ್ಧವಾಗಿ ಹರಿಯುತ್ತದೆ.

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಇದ್ದು ಈ ವೇಳೆ ಈ ಪುರಾತನ ರಾಮಮಂದಿರದಲ್ಲಿ ವಿಶೇಷ ಪೂಜೆ ರಾಮ ಮೂರ್ತಿಯ ಪಲ್ಲಕ್ಕಿ ಉತ್ಸವ, ದೀಪೋತ್ಸವ ಸೇರಿದಂತೆ ಅನೇಕ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

Wednesday, 10 January 2024

Yuva Nidhi Scheme; ನಾಳೆ ಶಿವಮೊಗ್ಗದಲ್ಲಿ ಚಾಲನೆ.

 


ಯುವನಿಧಿ ಯೋಜನೆಯಡಿ 2023ನೇ ಸಾಲಿನಲ್ಲಿ ಪದವೀಧರರಿಗೆ ಮತ್ತು ಡಿಪ್ಲೊಮಾ ಉತ್ತೀರ್ಣರಾಗಿ ಉದ್ಯೋಗ ದೊರಕದ ಅಭ್ಯರ್ಥಿಗಳಿಗೆ ಪದವಿ ಅಭ್ಯರ್ಥಿಗಳಿಗೆ ಮಾಸಿಕ 3 ಸಾವಿರ ರೂ. ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಗೆ ಮಾಸಿಕ 1,500 ರೂ. ನಿರುದ್ಯೋಗ ಭತ್ತೆಯನ್ನು ನೀಡಲಾಗುತ್ತದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೋಂದಣಿಗೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಈಗಾಗಲೇ 1,700ಕ್ಕೂ ಹೆಚ್ಚಿನ ಯುವಕ ಯುವತಿಯರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ.ಜ. 12ರಂದು ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ ¤ರಾಷ್ಟ್ರೀಯ ಯುವ ದಿನದಂದು ಶಿವಮೊಗ್ಗ ಫ್ರೀಡಂ ಪಾರ್ಕ್‌ನಲ್ಲಿ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಯುವ ನಿಧಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯಲ್ಲಿ ಈ ಯೋಜನೆಯಡಿ ನೋಂದಾಯಿಸಿರುವ ಅಭ್ಯರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tuesday, 9 January 2024

ಸರ್ಕಾರಿ ಬಂಗಲೆ ಖಾಲಿ ಮಾಡದ ಮಾಜಿ ಸಂಸದೆ ಮಹುವಾ ಮೊಯಿತ್ರಾಗೆ ನೋಟಿಸ್ ಜಾರಿ


ಸರ್ಕಾರಿ ಬಂಗಲೆಯನ್ನು ತೆರವು ಮಾಡದಿದ್ದಕ್ಕಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಾಜಿ ಸಂಸದೆ ಮಹುವಾ ಮೊಯಿತ್ರಾ ಅವರಿಗೆ ಎಸ್ಟೇಟ್ ನಿರ್ದೇಶನಾಲಯ (ಡಿಒಇ) ಸೋಮವಾರ ಶೋಕಾಸ್ ನೋಟಿಸ್ ನೀಡಿದೆ. ನಗರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ಈ ಮಾಹಿತಿಯನ್ನು ನೀಡಿದೆ.ಕಳೆದ ವರ್ಷ ಡಿಸೆಂಬರ್ 8 ರಂದು ತೃಣಮೂಲ ಕಾಂಗ್ರೆಸ್ ಸಂಸದೆ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಲಾಗಿತ್ತು. ಅವರ ಖಾತೆಯನ್ನು ರದ್ದುಗೊಳಿಸಿದ್ದರಿಂದ ಜನವರಿ 7 ರೊಳಗೆ ಬಂಗಲೆಯನ್ನು ಖಾಲಿ ಮಾಡುವಂತೆ ತಿಳಿಸಲಾಯಿತು. ಆದರೆ ಇದುವರೆಗೂ ಬಂಗಲೆ ಖಾಲಿ ಮಾಡದ ಕಾರಣ ಶೋಕಾಸ್ ನೋಟಿಸ್‌ ನೀಡಿದ್ದು 3 ದಿನಗಳಲ್ಲಿ ಉತ್ತರಿಸುವಂತೆ ಎಸ್ಟೇಟ್ ನಿರ್ದೇಶನಾಲಯ ಕೇಳಿದೆ.ಮೊಯಿತ್ರಾ ಅವರಿಗೆ ನೀಡಲಾದ ಶೋಕಾಸ್ ನೊಟೀಸ್ ನಲ್ಲಿ ಸರ್ಕಾರಿ ಬಂಗಲೆಯನ್ನು ಏಕೆ ಇನ್ನೂ ತೆರವು ಮಾಡಿಲ್ಲ ಎಂದು ಕೇಳಲಾಗಿದ್ದು ಇದಕ್ಕೆ ಉತ್ತರ ನೀಡುವಂತೆ ಕೇಳಿದೆ.

ಬೆಂಗಳೂರು – ಮಂಗಳೂರು ಬಸ್ಸು ತಡೆದು ಮಾರಕಾಸ್ತ್ರದಿಂದ ಹಲ್ಲೆ- ಪುಡಿ ರೌಡಿಯ ಕಾಲಿಗೆ ಗುಂಡೇಟು, ಅರೆಸ್ಟ್‌

 ಹಾಸನ: ಬೆಂಗಳೂರಿನಿಂದ ಮಂಗಳೂರಿಗೆ  ತೆರಳುತ್ತಿದ್ದ ಖಾಸಗಿ ಬಸ್ ತಡೆದು ಲಾಂಗ್‌ನಿಂದ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದ ಪುಡಿರೌಡಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘ...